ವರದಿ: ಅನ್ನಪೂರ್ಣ, ಸ್ವಾತಿ ಕೆ.ಬಿ, ಶ್ರೀರಕ್ಷಾ, ವಿದ್ಯಾ, ಅರ್ಪಿತಾ.
“ಪ್ರತಿಯೊಬ್ಬರಿಗೂ ತಾವಿರುವ ಸ್ಥಳದ ಸ್ಥಳೀಯ ಇತಿಹಾಸದ ಬಗ್ಗೆ ಅರಿವಿರುವುದು ಬಹಳ ಮುಖ್ಯ, ಎಂದು ಪುರಾತತ್ವ ಸಂಶೋಧಕರಾದ ಡಾ. ಸುಪ್ರೀತ ಕೆ. ಎನ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರೆ ಕೂಟ ಮತ್ತು ಹಾಸನದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದೊಂದಿಗೆ ‘ಕಳಸ ಇತಿಹಾಸ ಮತ್ತು ಕ್ಷೇತ್ರಕಾರ್ಯ ಅನುಭವ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಇತಿಹಾಸದ ವಿದ್ಯಾರ್ಥಿಗಳಾಗಿ ನಾವು ಸ್ಥಳೀಯ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತ ಕೆಲಸದಲ್ಲಿ ನಿರತರಾಗಬೇಕು, ಇತಿಹಾಸ ಶೋಧನೆಯೆನ್ನುವುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ನಿಖರ ಮಾಹಿತಿಗಾಗಿ ಯಾವುದೇ ವಿಷಯದ ಬಗ್ಗೆ ಈ ಹಿಂದೆ ಆದಂತಹ ಕಾರ್ಯಗಳನ್ನು ಮುಂದುವರೆಸುವ ಅಥವಾ ಸಂದೇಹಗಳನ್ನು ಬಗೆಹರಿಸುವ ಕೆಲಸಗಳನ್ನು ಹೊಸ ಸಂಶೋಧಕರು ಮಾಡಬೇಕಾಗುತ್ತದೆ. ಇತಿಹಾಸ ಸಂಶೋಧಕನು ಯಾವುದೇ ಘಟನೆಗಳನ್ನು ಆಧಾರವಿಲ್ಲದೆ ಪ್ರತಿಪಾದಿಸಲು ಸಾಧ್ಯವಿಲ್ಲ, ಇದೇ ಪುರಾಣ ಮತ್ತು ಇತಿಹಾಸಕ್ಕಿರುವ ವ್ಯತ್ಯಾಸ. ಇತಿಹಾಸದ ಮೂಲಕ ನಾವು ಸತ್ಯವನ್ನಷ್ಟೇ ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಇಂತಹ ಸಂದರ್ಭದಲ್ಲಿ ಜನರ ನಂಬಿಕೆಗಳಿಗೆ ಘಾಸಿಯಾಗುವ ಪರಿಸ್ಥಿತಿ ಉದ್ಭವಿಸಬಹುದಾದರೂ, ನಾವು ಒತ್ತಡಕ್ಕೊಳಗಾಗಿ ಆಧಾರವಿಲ್ಲದೇ ಯಾವುದನ್ನು ಒಪ್ಪಿಕೊಳ್ಳಬಾರದು. ನಿರಂತರ ಅಧ್ಯಯನ, ಕ್ಷೇತ್ರಕಾರ್ಯ ಇತಿಹಾಸ ಸಂಶೋಧಕನಿಗೆ ತನ್ನ ಸಂಶೋಧನೆಯ ಬಗ್ಗೆ ಹೆಚ್ಚು ಸ್ಪಷ್ಟತೆಯನ್ನು ತಂದುಕೊಡುತ್ತದೆ” ಎಂದರು.
ನಿವೃತ್ತ ಕೃಷಿ ಅಧಿಕಾರಿ ಮತ್ತು ಹವ್ಯಾಸಿ ಇತಿಹಾಸ ಸಂಶೋದಕರಾದ ಪಾಂಡುರಂಗ ಹೆಚ್.ಆರ್ ಮಾತನಾಡಿ “ಕಳಸದ ಸ್ಥಳೀಯ ಇತಿಹಾಸದ ಬಗ್ಗೆ ಸಂಶೋಧನೆಯಾಗಬೇಕಿರುವುದು ಬಹಳಷ್ಟಿದೆ, ಈ ನಿಟ್ಟಿನಲ್ಲಿ ಡಾ. ಸುಪ್ರಿತ ಕೆ.ಎನ್ ರವರ ಪ್ರಯತ್ನ ಶ್ಲಾಘನೀಯ. ಇಲ್ಲಿನ ಹಲವು ಶಾಸನಗಳು ಈಗಾಗಲೇ ದಾಖಲಿಸಲ್ಪಟ್ಟಿದ್ದರೂ, ಅಪ್ರಕಟಿತ ಹಲವು ಶಾಸನಗಳು ಇಂದಿಗೂ ಇವೆ ಹಾಗೂ ಕೆಲವನ್ನು ಮರು ಅಧ್ಯಯನಕ್ಕೊಳಪಡಿಸಿ ಪ್ರಕಟಿಸುವ ಅಗತ್ಯತೆಯಿದೆ” ಎಂದು ಹೇಳಿದರು.
“ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಪ್ರಾಚೀನ ಸ್ಮಾರಕ ಮತ್ತು ಪರಂಪರೆಯ ರಕ್ಷಣೆಗಾಗಿ ಬಹಳಷ್ಟು ಯೋಜನೆಗಳನ್ನು ಹೊಂದಿದೆ. ಇದರ ಭಾಗವಾಗಿ ಪ್ರತಿ ಕಾಲೇಜಿನಲ್ಲಿ ಪರಂಪರೆ ಕೂಟವನ್ನು ಸ್ಥಾಪಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆ ಬಗ್ಗೆ ಅರಿವು ಮೂಡಿಸುವುದು, ಅಳಿವಿನಂಚಿನ ಸ್ಮಾರಕಗಳನ್ನು ರಕ್ಷಿಸುವುದು ಹಾಗೂ ಸ್ಥಳೀಯ ಐತಿಹಾಸಿಕ ಸ್ಥಳಗಳಿಗೆ ಬೇಟಿ ಮಾಡಿಸುವಂತಹ ಕಾರ್ಯಗಳಿಗೆ ಅಗತ್ಯ ನೆರವು ನೀಡುತ್ತಾ ಬಂದಿದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ಕುಮಾರ್ ಹೆಚ್.ಸಿ ತಿಳಿಸಿದರು.
“ಐತಿಹಾಸಿಕ ದೇವಾಲಯ ಮತ್ತು ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಸಂದರ್ಭಗಳಲ್ಲಿ ಮೂಲ ರಚನೆಗೆ ದಕ್ಕೆಯಾಗದಂತೆ ಸಂಬಂಧಪಟ್ಟವರು ಗಮನಹರಿಸಬೇಕು, ನಮ್ಮ ಮುಂದಿನ ಪೀಳಿಗೆಯರಿಗೂ ಅದನ್ನು ನೋಡುವ ಭಾಗ್ಯ ದೊರೆಯಬೇಕು” ಎಂದು ಕಾಲೇಜು ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯಾ ಸದಾನಂದ ಕಾಲೇಜಿನ ಪೋಷಕರ ವೇದಿಕೆ ಅಧ್ಯಕ್ಷ ಅಜಿತ್ ಕುಮಾರ್, ಉಪನ್ಯಾಸಕ ಸಚಿನ್ ಕುಮಾರ್ ವಿದ್ಯಾರ್ಥಿಗಳಾದ ರಚನಾ, ಸುರಭಿ ಜೈನ್, ರಾಧಿಕಾ ಮತ್ತು ಪ್ರಗತಿ ಉಪಸ್ಥಿತರಿದ್ದರು.