ಕಳಸ ತಾಲ್ಲೂಕಿನ ಕುಂಬಳಡಿಕೆ ಸರ್ವೆ ನಂ 153ರಲ್ಲಿ ಕಳೆದ ಮೂರು ವರ್ಷಗಳಿಂದ ತಾತ್ಕಾಲಿಕ ಶೆಡ್ಡ್ ಹಾಕಿಕೊಂಡು ಕುಳಿತಿದ್ದ 70 ಕುಟುಂಬಗಳು ಸೋಮವಾರ ಹಕ್ಕು ಪತ್ರ ಮತ್ತು ಅಗತ್ಯ ಮೂಲಭೂತ ಸೌಲಭ್ಯ ನೀಡುವಂತೆ ಆಗ್ರಹಿಸಿ ಕಳಸ ತಾಲ್ಲೂಕು ಕಚೇರಿ ಮುಂಬಾಗ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳ ಹಿಂದೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ನೀಡಿದ ಭರವಸೆಯಂತೆ ಸರ್ವೆ ನಂ 153 ರಲ್ಲಿ 4 ಎಕರೆ ಭೂಮಿ ನಿವೇಶನ ರಹಿತರಿಗೆ ಮಂಜೂರು ಮಾಡಲಾಗಿತ್ತು.ಈ ಭೂಮಿಯಲ್ಲಿ ನಿವೇಶನ ರಹಿತ 70 ಕುಟುಂಬಗಳು ತಾತ್ಕಾಲಿಕ ಶೆಡ್ಡ್ ಹಾಕಿ ಕುಳಿತಿದ್ದರು.ಅಲ್ಲದೆ ಶಾಸಕರ ಅಭಿಮಾನಕ್ಕಾಗಿ ಕುಮಾರಸ್ವಾಮಿ ಬಡಾವಣೆ ಎಂಬ ಹೆಸರನ್ನೂ ಇಟ್ಟುಕೊಂಡಿದ್ದರು.ಆದರೆ ಮೂರು ವರ್ಷ ಸಂದರೂ ಕೂಡ ಹಕ್ಕು ಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡದೆ ಇರುವುದರಿಂದ ಸಹನೆ ಕಳೆದುಕೊಂಡ ನಿವೇಶನ ರಹಿತರು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಬುಡಕಟ್ಟು ಆದಿವಾಸಿ ಸಂಘದ ತಾಲ್ಲೂಕು ಅಧ್ಯಕ್ಷ ಸಂಜೀವ ಮಾತನಾಡಿ ಅಂದು ಶಾಸಕರ ಮೇಲಿನ ಅಭಿಮಾನಕ್ಕೆ ನಮ್ಮ ಬಡಾವಣೆಗೆ ಕುಮಾರಸ್ವಾಮಿ ಎಂದು ಹೆಸರು ಇಟ್ಟಿದ್ದೇವು ಆದರೆ ಇಂದು ಅವರ ಮೇಲಿನ ಅಭಿಮಾನದ ಹೋರಾಟವಲ್ಲ ಆಕ್ರೋಶದ ಹೋರಾಟವಾಗಿದೆ.ಅವರ ಮೇಲಿನ ಅಭಿಮಾನವನ್ನು ಕಳೆದುಕೊಂಡು ಇಂದು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ.ಕೇಂದ್ರದಲ್ಲಿ ಪ್ರದಾನಿಯವರು ಆದಿವಾಸಿಗಳನ್ನು ಎತ್ತರದ ಮಟ್ಟದಲ್ಲಿ ಕೂರಿಸಿದರೆ,ಇಲ್ಲಿ ಆದಿವಾಸಿಗಳಿಗೆ ಕೂರಲು ಒಂದು ಸೂರು ಇಲ್ಲ,ಕುಡಿಯಲು ನೀರಿಲ್ಲದ ಬಿಕ್ಷಾಟನೆ ಮಾಡುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.ಮೂರು ವರ್ಷಗಳಿಂದ ಹಿನಾಯ ಸ್ಥಿತಿಯಲ್ಲಿ ಬದುಕುತ್ತಿರುವುದನ್ನು ನೋಡಿಯೂ ನೋಡದಂತೆ ಇರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು.ನಮಗೆ ಹಕ್ಕು ಪತ್ರ ಕೊಡುವ ವರೆಗೆ ನಾವು ಇಲ್ಲಿಂದ ಕದಲುವುದಿಲ್ಲ.ಜಿಲ್ಲಾಧಿಕಾರಿಗಳು ನಾವು ಟೆಂಟ್ ಹಾಕಿ ಕುಳಿತಿರುವ ಸ್ಥಳಕ್ಕೆ ಬಂದು ನಮ್ಮ ಪರಿಸ್ಥಿತಿ ನೋಡಿ ನಮಗೆ ಹಕ್ಕು ಪತ್ರ ನೀಡುವ ವೆರೆಗೆ ನಮ್ಮ ಪ್ರತಿಭಟನೆ ಆಹೋರಾತ್ರಿ ಮುಂದುವರೆಯಲಿದೆ ಎಂದು ಹೇಳಿದರು.